09/08/2021
ನಾವು ಚಿಕ್ಕವರಿದ್ದಾಗ ಭಾರತ ಒಲಿಂಪಿಕ್ ನಲ್ಲಿ ಹಾಕಿಯಲ್ಲಿ ಚಿನ್ನ ಗೆಲ್ತಂತೆ........ ಈ ಮಾತು ಇವತ್ತು ಕಿವಿಯಲ್ಲಿ ಗುಂಯ್ ಗುಡುತ್ತಿದೆ. ತದ ನಂತರ ಬರಿಗೈಯಲ್ಲಿ ಮರಳಿದ ಭಾರತ ಎಂಬುದನ್ನು ನೋಡಿದೆ. ಆಗ ನನಗನ್ನಿಸಿದ್ದು ಸುಮಾರು ಅರವತ್ತು ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಚಿನ್ನ ಗೆಲ್ಲುವ, ಕೊನೇಪಕ್ಷ ಒಂದು ಪದಕ ಗೆಲ್ಲುವ ಒಬ್ಬರೇ ಒಬ್ಬರಿಲ್ಲವೇ ಎಂದು. ಹೆಸರೇ ಕೇಳದ ಯಾವುದೋ ದೇಶ ಪದಕ ಗೆಲ್ತಿವೆ. ಅದೂ ಅಥ್ಲೆಟಿಕ್ ವಿಭಾಗದಲ್ಲಿ. ಆಗ ಅಮೆರಿಕಾ, ರಷ್ಯಾದೇ ಮೇಲುಗೈ. ಅದರ ಮಧ್ಯೆ ಪಿ.ಟಿ.ಉಷಾ ಎಂಬ ಮಿಂಚು. 1996 ರಲ್ಲಿ ಲಿಯಾಂಡರ್ ಫೇಸ್ ರವರ ಕಂಚು....
ಇದು ಕೂಡಾ ನಮಗೆಲ್ಲರಿಗೂ ಒಂದು ಸ್ಪೂರ್ತಿ.... ತದ ನಂತರ , ಅಭಿನವ್ ಬಿಂದ್ರಾ (2008) ಶೂಟಿಂಗ್ ಚಿನ್ನ, ಕರ್ಣಂ ಮಲ್ಲೇಶ್ವರಿ (2000) ವೇಯ್ಟ್ ಲಿಪ್ಟಿಂಗ್ ಕಂಚು, ಯೋಧ ರಾಜವರ್ಧನ್ ಸಿಂಗ್ (2004) ಶೂಟಿಂಗ್ ಬೆಳ್ಳಿ, ವಿಜೇಂದ್ರ ಸಿಂಗ್ (2008) ಬಾಕ್ಸಿಂಗ್ ಕಂಚು, ಸುಶೀಲ್ ಕುಮಾರ್ ಕುಸ್ತಿ ಕಂಚು (2008), ಬೆಳ್ಳಿ (2012), ಗಗನ್ ನಾರಂಗ್ (2012) ಶೂಟಿಂಗ್ ಕಂಚು, ವಿಜಯ್ ಕುಮಾರ್ (2012) ಶೂಟಿಂಗ್ ಕಂಚು, ಮೇರಿ ಕೋಮ್ ಬಾಕ್ಸಿಂಗ್ ಕಂಚು (2012), ಯೋಗೇಶ್ವರ್ ದತ್ತು (2012) ಕುಸ್ತಿ ಕಂಚು, ಸೈನಾ ನೆಹವಾಲ್ (2012) ಬ್ಯಾಡ್ಮಿಂಟನ್ ಕಂಚು, ಪಿ.ವಿ.ಸಿಂಧು (2016) ಬ್ಯಾಡ್ಮಿಂಟನ್ ಬೆಳ್ಳಿ ಮತ್ತು ಸಾಕ್ಷಿ ಮಲಿಕ್ (2016) ಕುಸ್ತಿ ಬೆಳ್ಳಿ ಸಾಧನೆಗಳು ಮೂಡಿ ಬಂದವು....
2020 ನಮ್ಮ ಕ್ರೀಡಾ ಇತಿಹಾಸದ ಮೈಲಿಗಲ್ಲು, ಏಳು ಪದಕಗಳು, 48ನೇ ಸ್ಥಾನ.....
ಅಂದು ನಾವು ಕನಸಿನಲ್ಲೂ ಯೋಚಿಸಿರಲಿಲ್ಲ... ನಮ್ಮ ದೇಶದ ರಾಜಕೀಯ ಇಚ್ಛಾಶಕ್ತಿ ನನಗಂತೂ ಬಹಳ ನೋವಿತ್ತು. ಕ್ರೀಡೆಗೆ ಆಡಳಿತ ವರ್ಗದ ಬೆಂಬಲ ತೀರಾ ಶೋಚನೀಯವಾಗಿತ್ತು. ಅದರಲ್ಲೂ ಕ್ರೀಡಾಪಟುಗಳ ಆಯ್ಕೆಯಲ್ಲಿನ ರಾಜಕೀಯ.... ಕೇವಲ ಟೂರ್ ಗಾಗಿ ಒಲಿಂಪಿಕ್ ಗೆ ಹೋಗಲು ಮೀಸಲಾಗಿತ್ತು ಅನ್ನಿಸುತ್ತಿತ್ತು. ಮಹಿಳಾ ಕ್ರೀಡಾ ವಲಯದಲ್ಲಿ ಆಗಾಗ್ಗೆ ಕೇಳಿಸುತ್ತಿದ್ದ ಲೈಂಗಿಕ ದೌರ್ಜನ್ಯ ಆರೋಪಗಳು ಅಸಹ್ಯ ಅನಿಸುತ್ತಿತ್ತು. ಕ್ರೀಡಾ ಆಯ್ಕೆಗೆ ವಶೀಲಿಬಾಜಿ, ರಾಜಕೀಯ ಒತ್ತಡ ನಿಜವಾದ, ಅರ್ಹ ಕ್ರೀಡಾಪಟುಗಳಿಗೆ ಭ್ರಮನಿರಸನ ಉಂಟುಮಾಡುತ್ತಿತ್ತು.
ಅದರಲ್ಲೂ ಬೇರೆ ಕ್ರೀಡೆಗಳಿಗಿಂತ ಕ್ರಿಕೆಟ್ ಗೆ ಬೆಂಬಲ, ತೀರಾ ನೋವುಂಟು ಮಾಡುತಿತ್ತು.
ನಾವು ಉಚಿತವಾಗಿ ತರಬೇತಿ ನೀಡುತ್ತೇವೆ ಅಂದರೂ ಯಾರೂ ಬರುತ್ತಿರಲಿಲ್ಲ..... ದುಡ್ಡು ಕೊಟ್ಟು ಕ್ರಿಕೇಟ್ ಕೋಚಿಂಗ್ ಗೆ ಹೋಗುತ್ತಾರೆ.
ಅದರಲ್ಲೂ ಇತ್ತೀಚಿನ ಶಿಕ್ಷಣ ವ್ಯವಸ್ಥೆ. ದೈಹಿಕ ಶಿಕ್ಷಣಕ್ಕೆ ಬೆಂಬಲ ಇಲ್ಲ..... ಕ್ರೀಡೆಗೆ ಆಸ್ಪದವೇ ನೀಡದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು. ತೀರಾ ಅಸಹ್ಯ.... ಅದರಲ್ಲೂ ಡಾಕ್ಟರ್, ಇಂಜಿನಿಯರ್ ಮಾಡುವ ಪೋಷಕರ ಮನಸತ್ವ.... ಯಾರಿಗೆ ಹೇಳಲಿ ಮನದಾಳದ ನೋವು.
ಅಲ್ಲಿಗೂ ಹೇಳುತ್ತಿರುತ್ತೇನೆ, ನಮ್ಮ ಪೀಳಿಗೆಯವರು ಅದೃಷ್ಟವಂತರು. ಚಿಕ್ಕಂದಿನಲ್ಲಿ ನಾವು ಆಡದ ಆಟವಿಲ್ಲ. ಊಟವಿಲ್ಲದಿದ್ದರೂ ಮೈದಾನದಲ್ಲೇ ಆಟವಾಡಿ ಕಾಲ ಕಳೆಯುತ್ತಿದ್ದೆವು. ಇದೇ ನಮಗೆ ಇಂದಿಗೂ ಆರೋಗ್ಯ ನೀಡಿದೆ. ನಾವು ಚಿಕ್ಕವರಿದ್ದಾಗ ಬಿಪಿ, ಶುಗರ್ ಯಾರೋ ಶ್ರೀಮಂತರಿಗೆ ಬರುತ್ತಿದ್ದ ಕಾಯಿಲೆ. ಆದರೆ ಇಂದು 20 ರಿಂದ 35 ವಯಸ್ಸಿನಲ್ಲಿ ಈ ಎಲ್ಲಾ ಕಾಯಿಲೆಯಿಂದ ಬಳಲುವ ಯುವ ಜನಾಂಗ ನೋಡುತ್ತಿದ್ದೇವೆ.
ನಮ್ಮ ಬಾಲ್ಯವಂತೂ ನಮಗೆ ಆರೋಗ್ಯ ನೀಡಿದೆ... ದಯವಿಟ್ಟು ಯೋಚಿಸಿ..... ನಮ್ಮ ಮಕ್ಕಳು ನಮ್ಮ ಕಣ್ಣ ಮುಂದೆ ಹೃದಯಾಘಾತಕ್ಕೆ, ಇತರೆ ಅನಾರೋಗ್ಯಕ್ಕೆ ಬಲಿ ಆಗುತ್ತಿರುವುದನ್ನು ನಾವು ನೋಡಬಾರದೆಂದರೆ..... ಮಕ್ಕಳಿಗೆ ಆಟವಾಡಲು ಬಿಡಿ.... ಕ್ರೀಡೆಗೆ ಪ್ರೋತ್ಸಾಹಿಸಿ ಎಂದು ಹೇಳುತ್ತಲೇ ಇರುತ್ತೇನೆ.
ಮಕ್ಕಳನ್ನು ಈಗಲಾದರೂ ಓದಿನ ಒತ್ತಡದಿಂದ ಮುಕ್ತಗೊಳಿಸಿ. ಅವರಿಗೆ ಮೊಬೈಲ್ ನಿಂದ, ಕಂಪ್ಯೂಟರ್ ನಿಂದ, ಟಿವಿಯಿಂದ ದೂರವಿಡಿ. ನಮ್ಮ ಕಣ್ಣ ಮುಂದೆ ನಮ್ಮ ಮಕ್ಕಳು ಚೆನ್ನಾಗಿರಲಿ. ಸಾಧನೆ ಮೆರೆಯಲಿ ಎಂಬುದಷ್ಟೇ ನನ್ನ ಆಶಯ.
ಈಗಲಾದರೂ ನಮ್ಮ ದೇಶದ ಕ್ರೀಡಾಪಟುಗಳ ಈ ಸಾಧನೆ ಪರಿವರ್ತನೆಗೆ ನಾಂದಿ ಹಾಡಲಿ ಎಂಬುದು ನನ್ನ ಆಶಯ.
ತಾಳ್ಮೆಯಿಂದ ಓದಿದ ತಮಗೆ ಧನ್ಯವಾದಗಳು.
ಪುರುಷೋತ್ತಮ.
ಕೋಲಾರ ಕ್ರೀಡಾ ಸಂಘ