15/08/2026
ಬಾಸಗೋಡ ನಡುಬೇಣದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ
ಬಾಸ್ಗೋಡದಲ್ಲಿ ಜನತಾ ಕ್ರಿಕೆಟ್ ಕ್ಲಬ್ ವತಿಯಿಂದ ಅರ್ಥಪೂರ್ಣ ಸ್ವಾತಂತ್ರ್ಯ ದಿನಾಚರಣೆ
ಅಂಕೋಲಾ ತಾಲೂಕಿನ ಬಾಸ್ಗೋಡದಲ್ಲಿ ಜನತಾ ಕ್ರಿಕೆಟ್ ಕ್ಲಬ್ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಾಸ್ಗೋಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ನಡುಬೇಣ ಮೈದಾನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜನತಾ ಕ್ರಿಕೆಟ್ ಕ್ಲಬ್ನ ಅಧ್ಯಕ್ಷರಾದ ರಜತ್ ಹೊನಪ್ಪ ನಾಯಕ ಅವರು ಧ್ವಜಾರೋಹಣ ನೆರವೇರಿಸಿ, ನೆರೆದಿದ್ದ ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಮಸ್ಥರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಬಾಸ್ಗೋಡದ ಹೆಮ್ಮೆಯ ಪ್ರತಿಭೆ, ಜನತಾ ಕ್ರಿಕೆಟ್ ಕ್ಲಬ್ನ ಸಕ್ರಿಯ ಸದಸ್ಯೆ ಕುಮಾರಿ ಪ್ರಥ್ವಿ ದೇವಾನಂದ ಗಾಂವಕರ ಅವರು ಭಾರತೀಯ ಸೇನೆಯ ಆಫೀಸರ್ ಹುದ್ದೆಗೆ ಆಯ್ಕೆಯಾಗಿರುವುದನ್ನು ಸ್ಮರಿಸಿ, ಅಭಿನಂದನೆ ಸಲ್ಲಿಸಲಾಯಿತು. ಬಾಲ್ಯದಿಂದಲೇ ಚದ್ಮವೇಷ, ಯಕ್ಷಗಾನ, ಕಾರ್ಯಕ್ರಮ ನಿರೂಪಣೆ, ಸ್ವಾಗತ ಗೀತೆ ಸೇರಿದಂತೆ ಜನತಾ ಕ್ರಿಕೆಟ್ ಕ್ಲಬ್ನ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿರುವ ಪ್ರಥ್ವಿ, ಇಂದು ದೇಶಸೇವೆಯ ಮಹತ್ವದ ಜವಾಬ್ದಾರಿಗೆ ಆಯ್ಕೆಯಾಗಿರುವುದು ಗ್ರಾಮಕ್ಕೂ, ಕ್ಲಬ್ಗೂ ಹಾಗೂ ವಿದ್ಯಾರ್ಥಿ ಸಮುದಾಯಕ್ಕೂ ಹೆಮ್ಮೆಯ ಸಂಗತಿಯಾಗಿದೆ.
ಪ್ರಥ್ವಿಯ ಸಾಧನೆಯನ್ನು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಪರಿಚಯಿಸಿ, ಕನಸು ಕಾಣುವುದಷ್ಟೇ ಅಲ್ಲ, ಅದನ್ನು ಸಾಕಾರಗೊಳಿಸಲು ಶಿಸ್ತು, ಪರಿಶ್ರಮ ಮತ್ತು ನಿರಂತರ ಅಧ್ಯಯನ ಅಗತ್ಯ ಎಂಬ ಸಂದೇಶವನ್ನು ನೀಡಲಾಯಿತು. ದೇಶದ ಸೇನೆಯಂತಹ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂದಿನಿಂದಲೇ ಗುರಿ ಹೊಂದಿ, ತಮ್ಮ ಶಿಕ್ಷಣ ಹಾಗೂ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಲಾಯಿತು.
ಜೋರು ಮಳೆಯ ನಡುವೆಯೂ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಉತ್ಸಾಹ ಮಾತ್ರ ಕೊಂಚವೂ ಕುಗ್ಗಲಿಲ್ಲ. ಮಳೆಯನ್ನೂ ಲೆಕ್ಕಿಸದೆ ಮಕ್ಕಳು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಭಾಗವಹಿಸಿದ್ದು, ದೇಶಪ್ರೇಮದ ಉತ್ಸಾಹಕ್ಕೆ ಸಾಕ್ಷಿಯಾಯಿತು.
ಮಳೆ ಸುರಿದರೂ ಸಂಭ್ರಮ ನಿಲ್ಲಲಿಲ್ಲ; ಧ್ವಜ ಹಾರಿದಂತೆ ಮಕ್ಕಳ ಕನಸುಗಳೂ ಎತ್ತರಕ್ಕೆ ಹಾರಲಿ ಎಂಬ ಆಶಯದೊಂದಿಗೆ ಬಾಸ್ಗೋಡದಲ್ಲಿ ನಡೆದ ಈ ಸ್ವಾತಂತ್ರ್ಯೋತ್ಸವ ಸ್ಮರಣೀಯವಾಗಿ ಮೂಡಿಬಂದಿತು.