02/01/2022
'ತೆರೇಸಾ'ರ ಸಂಸ್ಥೆಯನ್ನೇ ಕಾಪಾಡಲಿಲ್ಲ'ಏಸಪ್ಪ'
'ಮದರ್ ತೆರೇಸಾ'ಹೆಸರು ಯಾರಿಗೆ ತಾನೇ ಗೊತ್ತಿಲ,ಚಿಕ್ಕ ವಯಸ್ಸಿನಲ್ಲಿ ನಾವುಗಳು ಓದಿದ ಶಾಲೆಗಳ ಪಠ್ಯಪುಸ್ತಕಗಳಲ್ಲಿ ಈಕೆಯನ್ನು ಜಗತ್ತಿನಲ್ಲಿ ಸೇವೆ ಮಾಡಲೆಂದೇ ಹುಟ್ಟಿರುವ ದೇವತೆಯೆಂಬಂತೆ ಬಿಂಬಿಸಲಾಗಿತ್ತು.ಸೇವೆಯೆಂದರೆ 'ಮದರ್ ತೆರೇಸಾ','ಮದರ್ ತೆರೇಸಾ' ಎಂದರೆ ಸೇವೆಯೆಂಬಂತೆ ಹೇಳಲಾಗುತ್ತಿತ್ತು.ನಾನು ಓದುತ್ತಿದ್ದಂತಹ ಶಾಲೆಗೆ ಕ್ರಿಶ್ಚಿಯನ್ ಮಿಷನರಿಯೊಂದು ನಡೆಸುತ್ತಿದ್ದಂತಹ 'ಹಾಸ್ಟೆಲ್'ನಿಂದ ಪ್ರತಿನಿತ್ಯ ಸುಮಾರು 50 ರಿಂದ 60 ಮಕ್ಕಳು ಓದಲು ಬರುತ್ತಿದ್ದರು.ಇವರಲ್ಲಿ ಬಹುತೇಕರಿಗೆ ಕುಟುಂಬದಲ್ಲಿ ಹಣಕಾಸಿನ ಸಮಸ್ಯೆ ಇತ್ತೆಂಬುದನ್ನು ಬಿಟ್ಟರೆ ಉತ್ತಮ ಕುಟುಂಬ ಹಿನ್ನಲೆಯಿಂದ ಬಂದವರಾಗಿದ್ದರು ಹಾಗು ಬಹುತೇಕರು ಹಿಂದೂ ಧರ್ಮದವರಾಗಿದ್ದವರರು.ಆದರೆ ಇವರ ಹಾಸ್ಟೆಲ್ ನಡೆಸುತ್ತಿದ್ದದ್ದು ಕ್ರಿಶ್ಚಿಯನ್ ಮಿಷನರಿಯಾಗಿದ್ದರಿಂದ ಪ್ರತಿನಿತ್ಯ ಮತ್ತದೇ ಏಸು ಕ್ರಿಸ್ತನ ಜಪ.ಇವರುಗಳ ತಲೆಯಲ್ಲಿ 'ಮದರ್ ತೆರೇಸಾ'ರ ಹೆಸರನ್ನು ಅದೆಷ್ಟು ಆಳವಾಗಿ ತುಂಬಲಾಗಿತ್ತೆಂದರೆ,ಸೇವೆಯೆಂದರೆ ಸಾಕು ಇವರಿಗೆ 'ಮದರ್ ತೆರೇಸಾ'ಹೆಸರು ಬಿಟ್ಟು ಮತ್ಯಾವ ಹೆಸರೂ ಕೇಳಿಸುತ್ತಿರಲಿಲ್ಲ.ಒಂದು ಹಂತದಲ್ಲಿ ನಮ್ಮಗಳ ಮನಸ್ಸಿನಲ್ಲಿಯೂ ಸಹ 'ಮದರ್ ತೆರೇಸಾ' ದೇವರಂತೆ ಕಂಡಿದ್ದು ಸುಳ್ಳಲ್ಲ,ಈಕೆಯ ಸೇವೆಯನ್ನು ಮೆಚ್ಚಿ 1979 ರಲ್ಲಿಯೇ 'ನೊಬೆಲ್' ಶಾಂತಿ ಪುರಸ್ಕಾರವನ್ನು ನೀಡಲಾಗಿತ್ತು,ಭಾರತದ ನೊಬೆಲ್ ಪುರಸ್ಕೃತರ ಹೆಸರು ಹೇಳಲು ಯಾರಾದರೂ ಕೇಳಿದರೆ ಸಾಕು ಹೆಮ್ಮೆಯಿಂದ 'ಮದರ್ ತೆರೇಸಾ'ಹೆಸರು ಹೇಳುತ್ತಿದ್ದಂತಹ ಶಾಲಾ ದಿನಗಳವು.ಈಕೆಯ ಸೇವೆಯನ್ನು ಮೆಚ್ಚಿ ನೀಡಿದರೋ ಅಥವಾ ಸೇವೆಯ ಹೆಸರಿನಲ್ಲಿ 'ಮದರ್ ತೆರೇಸಾ' ನಡೆಸಿದ ಮತಾಂತರವನ್ನು ಮೆಚ್ಚಿ ಪಾಶ್ಚಿಮಾತ್ಯ ದೇಶಗಳು 'ನೊಬೆಲ್' ಪ್ರಶಸ್ತಿ ನೀಡಿದವೋ ಎಂಬ ಅನುಮಾನ ಈಗ ಕಾಡುತ್ತಿದೆ.'ಮದರ್ ತೆರೇಸಾ' ಭಾರತಕ್ಕೆ ಬರುವ ಮೊದಲೇ 'ಸೋದರಿ ನಿವೇದಿತಾ' ಕೊಲ್ಕತ್ತಾಕ್ಕೆ ಬಂದು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದರು,ಸ್ವಾಮಿ ವಿವೇಕಾನಂದರ ಆಶಯಗಳನ್ನು ಯುವ ಪೀಳಿಗೆಯ ತಲೆಯಲ್ಲಿ ಬಿತ್ತುವ ಕೆಲಸದಲ್ಲಿ ತೊಡಗಿದ್ದಂತಹ 'ಸೋದರಿ ನಿವೇದಿತಾ'ಮಾಡಿದ ಸೇವೆಯನ್ನು ನಾವ್ಯಾರು ಸಹ ಪಠ್ಯಗಳಲ್ಲಿ ಓದಲೇ ಇಲ್ಲ,ವಿವೇಕಾನಂದರ ಯೋಚನೆಗಳನ್ನು ಅನುಷ್ಠಾನಗೊಳಿಸಲು ಆಕೆ ಪಟ್ಟಂತಹ ಕಷ್ಟಗಳ ಬಗ್ಗೆ ಉಲ್ಲೇಖವೇ ಇಲ್ಲ,ಆಕೆಗೆ 'ನೊಬೆಲ್'ಬೇಡ ಭಾರತದ ಅತ್ಯುನ್ನತ ಪ್ರಶಸ್ತಿಯೂ ಸಹ ಸಿಗಲಿಲ್ಲ,ಯಾಕೆಂದರೆ ಆಕೆ ಪಾಶ್ಚಿಮಾತ್ಯರ ಸೇವೆಯ ಹೆಸರಿನ ಮತಾಂತರ ಮಾಡಲಿಲ್ಲ.
ಕೋಲ್ಕತ್ತಾದಲ್ಲಿ 1950 ರಲ್ಲಿ 'MISSIONARY OF CHARITY' ಸ್ಥಾಪನೆ ಮಾಡಿದ 'ಮದರ್ ತೆರೇಸಾ' ಸೇವೆಗೆಂದು ಬಳಸಿಕೊಂಡಿದ್ದು ಕುಷ್ಠ ರೋಗಿಗಳು,ಕ್ಷಯ ರೋಗಿಗಳು,ಬುದ್ದಿ ಮಾಂದ್ಯರು,ವೃದ್ದರು. ಸಣ್ಣ ದವಾಖಾನೆಗಳು,ಆಸ್ಪತ್ರೆಗಳು,ಸೇವಾ ಕೇಂದ್ರಗಳನ್ನು ತೆರೆದು ಸೇವೆಯನ್ನು ಮಾಡುತ್ತಾ ಬಂದಿತ್ತು 'MISSIONARY OF CHARITY'.ಏಳು ದಶಕಗಳಿಂದ ಪಾಶ್ಚಿಮಾತ್ಯ ದೇಶಗಳಿಂದ ನೂರಾರು ಕೋಟಿಯಷ್ಟು ಹಣ 'MISSIONARY OF CHARITY' ಸಂಸ್ಥೆಗೆ ದೇಣಿಗೆಯ ರೂಪದಲ್ಲಿ ಬಂದು ಬೀಳುತ್ತಿತ್ತು.ಸೇವೆಯ ಹೆಸರಿನಲ್ಲಿ 'ಮದರ್ ತೆರೇಸಾ' ಮತಾಂತರಗಳನ್ನು ಮಾಡುತ್ತಿದ್ದಾರೆಂಬ ಆರೋಪ ಎಂದಿನಿಂದಲೋ ಕೇಳಿ ಬರುತ್ತಿದೆ.ವಿದೇಶಗಳಿಂದ ಬಂದಂತಹ ದೇಣಿಗೆಗಳ ಮೂಲ ಹಾಗು ಬಳಕೆಯನ್ನು ನಿಯಂತ್ರಿಸಲು 'ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ'ಹಲವು ನಿರ್ಬಂಧಗಳನ್ನು ಹೇರುತ್ತದೆ.ಪ್ರತಿ ವರ್ಷವೂ ವಿದೇಶಗಳಿಂದ ಬರುವ ಹಣದ ಮೂಲ ಹಾಗು ಅದರ ಬಳಕೆಯ ಲೆಕ್ಕವನ್ನು ಪರಿಶೋಧಿಸಿ ವರದಿಗಳನ್ನು ನೀಡಬೇಕು,ಈ ವರದಿಗಳಲ್ಲಿ ಲೋಪಗಳು ಕಂಡು ಬಂದರೆ ಆ ಸಂಸ್ಥೆಯ ಪರವಾನಗಿಯನ್ನು ರದ್ದು ಮಾಡಲಾಗುತ್ತದೆ.ಒಮ್ಮೆ ರದ್ದು ಮಾಡಿದರೆ,ಪುನರ್ ಪರಿಶೀಲನೆಗೊಳಪಡಿಸುವುದು ಸುಲಭದ ಕೆಲಸವಲ್ಲ. 2014ರ ವರೆಗೂ 'ಅಂಟೋನಿಯೋ ಮೈನೋ' ನೇತೃತ್ವದ ಸರ್ಕಾರವಿತ್ತು,'MISSIONARY OF CHARITY' ಎಂತಹದ್ದೇ ವರದಿ ನೀಡಿದರೂ ಸಹ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.ತಲೆ ಕೆಡಿಸಿಕೊಂಡರೂ ಏಸು ಕ್ರಿಸ್ತನ ಕೇಂದ್ರ ಕಚೇರಿ ಇಟಲಿಯ 'ವ್ಯಾಟಿಕನ್'ನಿಂದ ಕರೆ ಬರುತ್ತಿತ್ತು,ಸಮಸ್ಯೆ ಪರಿಹಾರವಾಗುತ್ತಿತ್ತು.ಕಳೆದ ವಾರ 'MISSIONARY OF CHARITY' ಸಂಸ್ಥೆಯು ತನ್ನ ದೇಣಿಗೆಗಳು ಹಾಗು ಅದರ ಬಳಕೆಯ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲದ ಕಾರಣಕ್ಕಾಗಿ,ಅದರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.ಅದರ ಬ್ಯಾಂಕಿನ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆಯೆಂದು ಹೇಳಲಾಗುತ್ತಿದೆಯಾದರೂ,ಸ್ಥಗಿತಗೊಳಿಸಿಲ್ಲವೆಂದು 'MISSIONARY OF CHARITY'ಯ ಸಿಬ್ಬಂದಿಯೇ ಸ್ಪಷ್ಟಪಡಿಸಿದ್ದಾರೆ.ನಿಜವಾದ ಸೇವೆಯಲ್ಲಿ ಈ ಸಂಸ್ಥೆಯು ತೊಡಗಿದ್ದರೆ ಪರವಾನಿಗೆಯನ್ನು ರದ್ದುಗೊಳಿಸುವ ಪ್ರಮೇಯ ಬರುತ್ತಿರಲಿಲ್ಲ,ಸಂದಾಯವಾದಂತಹ ಹಣವು ಬೇರೆಡೆಗೆ ಬಳಕೆಯಾಗುತ್ತಿರುವ ಕಾರಣಕ್ಕಾಗಿ ಪರವಾನಿಗೆಯನ್ನು ರದ್ದುಗೊಳಿಸಲಾಗಿದೆ. ಈಗಾಗಲೇ ಕಮ್ಯುನಿಸ್ಟರು ಇದರ ಬಗ್ಗೆ ಜಾತ್ಯತೀತತೆಯ ಮೇಲಿನ ದಾಳಿಯೆಂದು ಹೇಳಿಕೊಂಡು ತಿರುಗುತ್ತಿದ್ದಾರೆ, ಮಮತಾ ಬ್ಯಾನೆರ್ಜಿಯಂತೂ ಕೇಂದ್ರ ಸರ್ಕಾರವು ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ದಾಳಿಯೆಂದು ಹೇಳಿಕೆ ನೀಡಿಯಾಯಿತು.
1994 ರಲ್ಲಿ 'HELL's ANGEL'ಎಂಬ ಸಾಕ್ಷ್ಯಚಿತ್ರ ಬಿಡುಗಡೆಯಾಗಿತ್ತು,ಮದರ್ ತೆರೇಸಾ ನಡೆಸುತ್ತಿದ್ದಂತಹ ಸಂಸ್ಥೆಯಲ್ಲಿ ಸ್ವಯಂಪ್ರೇರಿತನಾಗಿ ಕೆಲಸ ಮಾಡುತ್ತಿದ್ದಂತಹ ವ್ಯಕ್ತಿಯೊಬ್ಬ ಈ ಸಾಕ್ಷ್ಯಚಿತ್ರದ ರೂವಾರಿಯೆಂದು ಹೇಳಲಾಗುತ್ತದೆ. ಆಕೆಯ ಜೊತೆಯಲ್ಲಿ ಕೆಲಸ ಮಾಡುತ್ತಿದ್ದಂತಹ ವ್ಯಕ್ತಿ ಮಾಡಿರುವ ಸಾಕ್ಷ್ಯಚಿತ್ರವಾಗಿದ್ದರಿಂದ ಇದರಲ್ಲಿನ ಅಂಶಗಳನ್ನು ನಂಬಬಹುದು.ಈ ಸಾಕ್ಷ್ಯಚಿತ್ರದಲ್ಲಿ ರೋಗಿಗಳನ್ನು ನೋಡಿಕೊಳ್ಳುವ ಕೊಠಡಿಗಳಲ್ಲಿನ ಅವ್ಯವಸ್ಥೆಯ ಬಗ್ಗೆ ಹೇಳಲಾಗಿದೆ,ನೂರಾರು ರೋಗಿಗಳಿರುವ ಕೊಠಡಿಗಳಿಗೆ ಒಂದು ಅಥವಾ ಎರಡು ಶೌಚಾಲಯಗಳು, ಈ ಶೌಚಾಲಯಗಳನ್ನು ಸರಿಯಾಗಿ ಸ್ವಚ್ಛ ಗೊಳಿಸುತ್ತಿರಲಿಲ್ಲದ ಬಗ್ಗೆ ಉಲ್ಲೇಖಿಸಲಾಗಿದೆ,ಒಂದೇ ಸೂಜಿಯನ್ನು ಹಲವು ರೋಗಿಗಳಿಗೆ ಬಳಸುತ್ತಿದ್ದರೆಂಬ ಆರೋಪವಿದೆ. ಅದೇ ಸೂರಿನಲ್ಲಿ 'HIV' ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲಿ,ಸರಿಯಾಗಿ ಸೂಜಿಯನ್ನು ಬದಲಾಯಿಸುತ್ತಿರಲಿಲ್ಲವೆಂದರೆ ಅಲ್ಲಿನ ರೋಗಿಗಳ ಪರಿಸ್ಥಿತಿ ಅದೆಷ್ಟು ಭಯಾನಕವಾಗಿತ್ತೆಂಬುದನ್ನು ಅರ್ಥ ಮಾಡಿಕೊಳ್ಳಿ.ಸೂಜಿಗಳನ್ನು 'STERELIZE'ಕೂಡ ಮಾಡದೆ ಇತರ ರೋಗಿಗಳಿಗೆ ಬಳಸಲಾಗುತ್ತಿತ್ತೆಂದರೆ ಅಲ್ಲಿನ ಸೇವೆಯ ಭಯಾನಕ ಅನುಭವವನ್ನು ಕನಸಿನಲ್ಲಿಯೂ ಊಹಿಸಿಕೊಳ್ಳಲು ಸಾಧ್ಯವಿಲ್ಲ.ಅಂದಿನ ಕಾಲದಲ್ಲಿ ಭಾರತವೆಂಬ ಬಡರಾಷ್ಟ್ರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಬೇಕಿದ್ದಂತಹ ದೇಣಿಗೆಗಳನ್ನು ಸಂಗ್ರಹಿಸುವುದು ಕಷ್ಟವಾಗಿದ್ದಂತಹ ಕಾರಣಕ್ಕಾಗಿ ಈ ರೀತಿ ನಡೆದಿರಬಹುದೆಂದು ಕೆಲವು ಕಮ್ಯುನಿಸ್ಟರು ವಾದ ಮಾಡುತ್ತಾರೆ,ಆದರೆ ವಿದೇಶಗಳಿಂದ ದೇಣಿಗೆಗಳ ರೂಪದಲ್ಲಿ ಮದರ್ ತೆರೇಸಾ ಮಿಲಿಯನ್ ಗಟ್ಟಲೆ ಹಣವನ್ನು ಅಂದಿನ ಕಾಲದಲ್ಲಿಯೇ ತರಿಸಿದ್ದರು.ಹಾಗಾದರೆ ಸೇವೆಯ ಹೆಸರಿನಲ್ಲಿ ವಿದೇಶಗಳಿಂದ ದೇಣಿಗೆಯ ರೂಪದಲ್ಲಿ ಬಂದಂತಹ ಹಣ ಎಲ್ಲಿ ಹೋಯಿತು ? ರೋಗಿಗಳ ಸೇವೆಯಲ್ಲಿ ಸರಿಯಾಗಿ ಬಳಕೆಯಾಗಿದ್ದರೆ ಈ ಸಾಕ್ಷ್ಯಚಿತ್ರದಲ್ಲಿ ಹೇಳಿರುವಂತೆ ಒಂದು ಸೂಜಿಯನ್ನು ಬದಲಾಯಿಸುವಷ್ಟು ಹಣವೂ ಇರಲಿಲ್ಲವೇ ? ರೋಗಿಗಳ ಚಿಕೆತ್ಸೆಯ ಹೆಸರಿನಲ್ಲಿ ಅದೆಷ್ಟು ರೋಗಗಳು ಕೇವಲ ಸೂಜಿಯ ಬಳಕೆಯಿಂದ ಹರಡಿರಬಹುದೆಂದು ಊಹಿಸಲೂ ಸಾಧ್ಯವಾಗುತ್ತಿಲ್ಲ.ರೋಗಿಗಳಿಗೆ ಸರಿಯಾದ 'ಬಿಸಿ ನೀರಿನ'ವ್ಯವಸ್ಥೆ ಮಾಡದೆ ತಣ್ಣನೆಯ ನೀರಿನಲ್ಲಿ ಹತ್ತಾರು ದಿನಗಳ ಕಾಲ ಸ್ನಾನ ಮಾಡುತ್ತಿದ್ದರಂತೆ, ಮಕ್ಕಳು ಹಾಗು ಬುದ್ದಿಮಾಂದ್ಯರನ್ನು ಹಗ್ಗದಿಂದ ಕಟ್ಟಿ ಹಾಕಿರುವ ಹಲವು ದೃಶ್ಯಗಳನ್ನು ನೋಡಿರುವವರಿದ್ದಾರೆ.ರೋಗಿಗಳ ಮೇಲೆ ಇಷ್ಟೆಲ್ಲಾ ಹಿಂಸೆಗಳು ನಡೆಯುತ್ತಿದ್ದರೂ ಸಹ 'ಮಾನವ ಹಕ್ಕುಗಳ ಆಯೋಗ' ತುಟಿ ಬಿಚ್ಚಿರಲಿಲ್ಲ.ಪೊಲೀಸರು ಕ್ರಿಮಿನಲ್ ಗಳನ್ನು 'ಎನ್ಕೌಂಟರ್'ಮಾಡಿದಾಕ್ಷಣ ಹದ್ದುಗಳಂತೆ ಓಡೋಡಿ ಬರುವ ಮಾನವ ಹಕ್ಕುಗಳ ಆಯೋಗದವರಿಗೆ ಪಾಪ ಈ ರೋಗಿಗಳು ಕಾಣಿಸಲೇ ಇಲ್ಲ.ಒಂದು ಅಥವಾ ಎರಡು ಗುಣಮುಖರಾಗಿರುವ ರೋಗಿಗಳ ವಿಡಿಯೋ ತುಣುಕನ್ನು ಜಗತ್ತಿಗೆ ತೋರಿಸಿ ಮಂಕುಬೂದಿ ಎರಚಲಾಗುತ್ತಿತ್ತು. ಚಿಕಿತ್ಸಾಲಯಗಳ ಒಳಗಿನ ವಿಡಿಯೋವನ್ನು ಸಂಪೂರ್ಣವಾಗಿ ತೋರಿಸುವ ಧೈರ್ಯ ಮಾಡಿರಲಿಲ್ಲ.ಇದೆಲ್ಲವನ್ನೂ ನೋಡಿದರೆ ರೋಗಿಗಳನ್ನು ಗುಣಪಡಿಸುವುದು ಬಿಡಿ ಕನಿಷ್ಠ ಪಕ್ಷ ಅವರ ಪರಿಸ್ಥಿಯನ್ನು ಅಲ್ಪವಾದರೂ ಬದಲಾಯಿಸುವ ಕೆಲಸವನ್ನೂ ಈಕೆ ಮಾಡಲಿಲ್ಲವೆಂಬ ಅನುಮಾನ ಯಾರಿಗಾದರೂ ಬರುತ್ತದೆ.
ಸೇವೆಯ ಹೆಸರಿನಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಈಶಾನ್ಯ ಭಾರತದ ರಾಜ್ಯಗಳ ಚಿತ್ರಣಗಳನ್ನೇ ಬದಲಾಯಿಸಿಬಿಟ್ಟಿವೆ,ಕಾಂಗ್ರೆಸ್ ನೇತೃತ್ವದ ಸರ್ಕಾರ ಈಶಾನ್ಯ ರಾಜ್ಯಗಳ ಅಭಿವೃದ್ಧಿಯ ಕಡೆಗೆ ಹೆಚ್ಚು ಗಮನ ಹರಿಸದ ಕಾರಣ ಮಿಷನರಿಗಳು ಸೇವೆಯ ಹೆಸರಿನಲ್ಲಿ ಬಹುದೊಡ್ಡ ಮತಾಂತರವನ್ನೇ ಮಾಡಿದವು. ನೋಡ ನೋಡುತ್ತಲೇ ಈ ರಾಜ್ಯಗಳಲ್ಲಿ ಕ್ರಿಶ್ಚಿಯನ್ನರು ಬಹುಸಂಖ್ಯಾತರಾಗಿಬಿಟ್ಟರು.ಮಿಷನರಿಗಳು ಮಾಡಿರುವ ಸೇವೆಯನ್ನು ಯಾರೂ ಸಹ ಮಾಡಿಲ್ಲವೆಂದು ಹೇಳಿಕೊಂಡು ತಿರುಗುವ ಮತಾಂತರಿಗಳಿಗೆ,ನಮ್ಮ ಮಠಗಳು ಮಾಡುವ ಸೇವೆಯ ಬಗ್ಗೆ ಅರಿವಿಲ್ಲದಂತೆ ಕಾಣುತ್ತದೆ.ತುಮಕೂರಿನ ಸಿದ್ದಗಂಗಾ ಮಠ ಐದು ದಶಕಗಳಿಂದ ಕೋಟ್ಯಂತರ ಜನರಿಗೆ ಪ್ರತಿನಿತ್ಯ ದಾಸೋಹದ ಸೇವೆಯನ್ನು ಮಾಡುತ್ತಿದೆ,ಲಕ್ಷಾಂತರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗು ವಸತಿ ವ್ಯವಸ್ಥೆಯನ್ನು ನೀಡುತ್ತಾ ಬಂದಿದೆ, ಮಠದಡಿಯಲ್ಲಿರುವ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಸಾವಿರಾರು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.ಕೊಪ್ಪಳದ ಗವಿಮಠ,ಶೃಂಗೇರಿಯ ಶಾರದಾ ಪೀಠ,ಧರ್ಮಸ್ಥಳದಲ್ಲಿನ ಪ್ರತಿನಿತ್ಯದ ದಾಸೋಹ, ಹೊರನಾಡಿನಲ್ಲಿ ನಡೆಯುವ ಪ್ರತಿನಿತ್ಯದ ದಾಸೋಹ,ಬಾಲಗಂಗಾಧರನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಸುತ್ತಿರುವ ವಿದ್ಯಾ ಸಂಸ್ಥೆಗಳು,ಆಸ್ಪತ್ರೆಗಳು ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಕರೋನ ಸಂಧರ್ಭದಲ್ಲಿ ಆಸ್ಪತ್ರೆಗಳು,ವಸತಿ ನಿಲಯಗಳು ಹಾಗು ಸಮುಧಾಯ ಭವನಗಳನ್ನು ಕೋವಿಡ್ ರೋಗಿಗಳಿಗೆ ಉಚಿತ ಸೇವೆಗಾಗಿ ನೀಡಿದ್ದು ಹಿಂದೂ ಧರ್ಮದ ಮಠಗಳೇ ಹೊರತು ಚರ್ಚುಗಳಲ್ಲ.ನಮ್ಮ ಮಠಗಳಲ್ಲಿ ಎಂದೂ ಸಹ ಇಂತಹದ್ದೇ ದೇವರನ್ನು ಪೂಜಿಸಬೇಕು,ಈತನೊಬ್ಬನೇ ದೇವರೆಂದು ಹೇಳಿಕೊಡುವುದಿಲ್ಲ.
ಬ್ರಿಟಿಷ್ ಅಮೆರಿಕನ್ ಪತ್ರಕರ್ತ 'ಕ್ರಿಸ್ಟೋಫರ್ ಹಿಚೆನ್ಸ್' ಮದರ್ ತೆರೆಸಾರನ್ನು ಕ್ರಿಶ್ಚಿಯನ್ ಧರ್ಮದ ಮೂಲಭೂತವಾದಿಯೆಂದು ಕರೆದಿದ್ದ,ಈತ ಆಕೆಯನ್ನು ಹೀಗೆ ಕರೆದಿರಬೇಕಾದರೆ ಸೇವೆಯ ಹೆಸರಿನಲ್ಲಿ ನಡೆದಿರಬಹುದಾದಂತಹ ಮತಾಂತರವನ್ನು ಊಹಿಸಬಹುದು. ನೇರ ನುಡಿಗೆ ಹೆಸರಾಗಿದ್ದ 'ಕ್ರಿಸ್ಟೋಫರ್ ಹಿಚೆನ್ಸ್',ಮದರ್ ತೆರೇಸಾ ಬಡವರ ಸ್ನೇಹಿತೆಯಾಗಿರಲಿಲ್ಲ,ಬದಲಾಗಿ 'ಬಡತನದ' ಸ್ನೇಹಿತೆಯಾಗಿದ್ದಳೆಂದಿದ್ದ, ಈ ಮಾತಿನ ಆಳಕ್ಕೆ ಹೊಕ್ಕು ಯೋಚಿಸಿದರೆ ಬಡತನವನ್ನು ಬಳಸಿಕೊಂಡು ಸೇವೆಯ ಹೆಸರಿನಲ್ಲಿ ಮತಾಂತರಗಳು ನಡೆದಿರುವುದರಲ್ಲಿ ಯಾವುದೇ ಅನುಮಾನವಿಲ್ಲ.ಭಾರತದಲ್ಲಿರುವ ಕ್ರಿಶ್ಚಿಯನ್ ಮಿಷನರಿಗಳು ನಡೆಸುವ ಆಸ್ಪತ್ರೆಗಳ ಬಗ್ಗೆ ಪುಂಖಾನುಪುಂಖವಾಗಿ ಹೊಗಳಿ ಮಾತನಾಡುವವರಿಗೆ ತಿಳಿಯದ ಮತ್ತೊಂದು ವಿಷಯವೆಂದರೆ,ಸರಿಯಾದ ವೈದ್ಯಕೀಯ ತರಬೇತಿಯಿಲ್ಲದ ಹಲವು ದಾದಿಯರನ್ನು ಮದರ್ ತೆರೇಸಾ ತಮ್ಮ ಶುಶೃಷಾ ಕೇಂದ್ರಗಳಲ್ಲಿ ಬಳಸಿಕೊಳ್ಳುತ್ತಿದ್ದದ್ದು.ಸಾಮಾನ್ಯವಾಗಿ ಬಡವರು,ಬುದ್ದಿಮಾಂದ್ಯರು,ವಯಸ್ಸಾದವರು,ಒಂಟಿ ಮಹಿಳೆಯರು,ಸಮಾಜದಲ್ಲಿನ ಅಸ್ಪುಶ್ರತೆಗೊಳಗಾದವರನ್ನೇ ಗುರಿಯನ್ನಾಗಿಸಿಕೊಂಡು ಸೇವೆಯ ಹೆಸರಿನಲ್ಲಿ ಅವರ ಮನಸ್ಸಿನ ಮೇಲೆ ಪ್ರಭಾವ ಬೀರುವ ಹಲವು ಮತಾಂತರದ ವಿಷಯಗಳನ್ನು ಹೇಳಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಪ್ರಕ್ರಿಯೆ 'ಮದರ್ ತೆರೇಸಾ' ಭಾರತಕ್ಕೆ ಕಾಲಿಡುವುದಕ್ಕಿಂತಲೂ ಹಿಂದಿನಿಂದಲೂ ನಡೆಯುತ್ತಲೇ ಇತ್ತು.ಆದರೆ ರೋಗಿಗಳ ಸೇವೆಯ ಹೆಸರಿನಲ್ಲಿ ನಡೆಯುತ್ತಿದ್ದಂತಹ ಮತಾಂತರಕ್ಕೆ ಹೆಚ್ಚಿನ ವೇಗ ಸಿಕ್ಕಿದ್ದು ಮಾತ್ರ 'ಮದರ್ ತೆರೇಸಾ' ನಡೆಸುತ್ತಿದ್ದಂತಹ 'MISSIONARY OF CHARITY'ಸಂಸ್ಥೆಯ ಮೂಲಕವೆಂದರೆ ತಪ್ಪಿಲ್ಲ.ಈ ಸಂಸ್ಥೆಗೆ ಎಗ್ಗಿಲ್ಲದೆ ಬರುತ್ತಿದ್ದಂತಹ ವಿದೇಶಿ ದೇಣಿಗೆಗಳಿಗೆ ಈಗ ಕತ್ತರಿ ಬಿದ್ದಿದೆ,ಸರಿಯಾದಂತಹ ಲೆಕ್ಕ ನೀಡದ ಕಾರಣಕ್ಕಾಗಿ ಸಂಸ್ಥೆಯ ವಿದೇಶಿ ದೇಣಿಗೆಗಳ ಪರವಾನಿಗೆಯನ್ನು ರದ್ದು ಮಾಡಲಾಗಿದೆ.ಈ ಸಂಸ್ಥೆಯು ಕೇವಲ ವಿದೇಶಿ ದೇಣಿಗೆಗಳಿಂದ ಮಾತ್ರ ತನ್ನ ಕಾರ್ಯವನ್ನು ನಿರ್ವಹಿಸುತ್ತಿಲ್ಲ,ಭಾರತದಲ್ಲಿನ ಅನೇಕರು ಈ ಸಂಸ್ಥೆಗೆ ದೇಣಿಗೆಯನ್ನು ನೀಡುತ್ತಾರೆ. ಆದರೆ ವಿದೇಶದಿಂದ ಬರುತ್ತಿದ್ದಂತಹ ದೇಣಿಗೆಯ ಪ್ರಮಾಣ ಹೆಚ್ಚಿದ್ದರಿಂದ ಈಗ ತನ್ನ ಕಾರ್ಯಚಟುವಟಿಕೆಗಳಿಗೆ ಕತ್ತರಿ ಬಿದ್ದಿರುವುದಂತೂ ಸುಳ್ಳಲ್ಲ,ಜಗತ್ತನ್ನೇ ಕಾಪಾಡುವ 'ಏಸು ಕ್ರಿಸ್ತ' 'ಮದರ್ ತೆರೇಸಾ'ರ ಸಂಸ್ಥೆಯನ್ನೇ ಕಾಪಾಡಲಾಗಲಿಲ್ಲವಲ್ಲವೆಂಬುದೇ ಬಹುದೊಡ್ಡ ವಿಪರ್ಯಾಸ!